
‘ಗಡಿನಾಡು ಇರಲಿ, ಕಡಲ ತಡಿ ಇರಲಿ, ಕನ್ನಡ ನುಡಿ ತೇರು ಸಾಗುತಿರಲಿ ಮುಂದೆ, ಬನವಿರಲಿ, ಬಾನಂಗಳವಿರಲಿ, ಎಲ್ಲೆಡೆ ಕನ್ನಡ ಬಾವುಟ ರಾರಾಜಿಸುತ್ತಿರಲಿ’ ಎನ್ನುವಂತೆ ನಾಡು-ನುಡಿ-ಸಂಸ್ಕೃತಿ-ಗಡಿ ಅಭಿವೃದ್ಧಿಯ ಆಶಯ ಹೊತ್ತು ಆರ್ಥಿಕ, ಸಾಮಾಜಿ, ಶೈಕ್ಷಣಿಕ, ಮೂಲಭೂತ ಸೌಕರ್ಯದಲ್ಲಿ ರಾಜ್ಯದಲ್ಲಿಯೇ ಅತಿ ಹಿಂದುಳಿದ ತಾಲೂಕೆಂಬ ಮೇಲ್ಪಂಕ್ತಿಯಲ್ಲಿರುವ ಜೋಯಿಡಾ ತಾಲೂಕಿನ ‘ಕ್ಯಾಸಲ್ರಾಕ್’ನಲ್ಲಿ ನಡೆದ ‘ಗಡಿನಾಡ ಉತ್ಸವ-2011’ ಗಡಿಭಾಗದ ಜನತೆ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಅದ್ದೂರಿಯಾಗಿ ನಡೆಯಿತು.ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ನೇತೃತ್ವದಲ್ಲಿ ನವೆಂಬರ್ 26 ಮತ್ತು 27 ಎರಡು ದಿನಗಳ ಕಾಲ ನಡೆದ ಗಡಿ ಉತ್ಸವ ಜನಮಾನಸದಲ್ಲಿ ಸದಾ ನೆನಪಿನಲ್ಲಿರುವ ಘಟನೆಯಾಗಿ ದಾಖಲಾಯಿತು.ಉತ್ಸವ ಎರಡು ದಿನಗಳ ಕಾಲ ನಡೆದರೂ ಅದರ ನೆನಪು ವರ್ಷಂಪ್ರತಿ ಉತ್ಸವದ ಯಶಸ್ಸಿಗೆ ನಾಂದಿಯಾಯಿತು.
ತನ್ನ ಒಡಲಲ್ಲಿರುವ ಪ್ರದೇಶಗಳು ಮುಳುಗಡೆಯಾಗಿ ಸಾಲು ಸಾಲು ಅಣೆಕಟ್ಟುಗಳನ್ನು ಕಟ್ಟಿಸಿಕೊಳ್ಳುವ ಮೂಲಕ ಇಡೀ ರಾಜ್ಯಕ್ಕೆ ವಿದ್ಯುತ್ತನ್ನು ನೀಡಿದ ಹೆಮ್ಮೆಯ ಕಾಳಿ ನದಿಯ ತಾಣವಾದ ‘ಜೋಯಿಡಾ’(ಮುಳುಗಡೆ ಮುಂಚೆ ಸುಪಾ) ಗಡಿಭಾಗದಲ್ಲಿ ನಡೆದ ‘ಗಡಿ ಉತ್ಸವ’ ನಿರ್ದಿಷ್ಟ ಉದ್ದೇಶವನ್ನು ಸಾಧಿಸುವಲ್ಲಿ ಯಶಕಂಡಿದೆ ಎಂದರೆ ತಪ್ಪಾಗಲಾರದು. ‘ಕ್ಯಾಸಲ್ರಾಕ್’ ಎಂದು ಹೆಸರು ಕೇಳಿದರೆ ಮೈಜುಮ್ಮೆನಿಸುತ್ತದೆ. ಆಗಸವನ್ನು ಚುಂಬಿಸುವ ಪರ್ವತಗಳ ಸಾಲು, ದಟ್ಟಾರಣ್ಯ, ಮಳೆಗಾಲ ಬಂದರಂತೂ ರಾಜ್ಯದ ಚಿರಾಪುಂಜಿ ಎಂದೇ ಕರೆದರೂ ತಪ್ಪಾಗಲಾರದು.
ಚಳಿಗಾಲದಲ್ಲಿಯೂ ಕೂಡ ಅಷ್ಟೇ, ಮೈಕೊರೆವ ಚಳಿ, ಸೌಲಭ್ಯದ ದೃಷ್ಟಿಯಿಂದ ಗ್ರಾಮಕ್ಕೆ ತಲುಪಬೇಕೆಂದರೆ ದಿನಕ್ಕೊಂದು ಬಸ್ಸು ಇಲ್ಲವಾದರೆ ಬರೋಬರಿ ಹನ್ನೆರಡು ಕಿ.ಮೀ. ಪಾದಯಾತ್ರೆ, ಕುಣಬಿ ಸಮುದಾಯದವರೇ ಹೆಚ್ಚಿರುವ ಈ ಭಾಗದಲ್ಲಿ ಸಾಂಸ್ಕೃತಿಕವಾಗಿ ತಮ್ಮದೇ ಆದ ವಿಶಿಷ್ಟತೆಯನ್ನು ಹೊಂದಿದ್ದರೂ, ಭಾಷೆಯ ದೃಷ್ಟಿಯಿಂದ ನೋಡಿದರೆ ಬೆಳಗಾವಿಗೆ ಹೊಂದಿಕೊಂಡಂತೆ ಒಂದೆಡೆ ಮರಾಠಿ, ಇನ್ನೊಂದೆಡೆ ವ್ಯವಾಹಾರಿಕವಾಗಿ, ಹಾಗೂ ಉದ್ಯೋಗದ ದೃಷ್ಟಿಯಿಂದ ಸದಾ ಅವಲಂಬನೆಯಲ್ಲಿರುವ ಗೋವಾ ರಾಜ್ಯ ಮಗ್ಗುಲಲ್ಲಿರುವುದರಿಂದ ಹಿಂದಿ ಹಾಗೂ ಕೊಂಕಣಿ ಭಾಷೆಯ ಪ್ರಾಬಲ್ಯದ ಮಧ್ಯೆ ಅಸ್ಪಷ್ಟ ಕನ್ನಡವನ್ನು ಕೇಳುವ ಈ ತಾಣದಲ್ಲಿ ಎರಡು ದಿನಗಳ ಉತ್ಸವ ಕನ್ನಡದ ಕಂಪನ್ನು ಬೀರುವಲ್ಲಿ ಯಶಸ್ವಿಯಾಯಿತು.
‘ಭಾಷೆ ಭಿನ್ನವಾದರೂ ಭಾವ ಒಂದೆ’: ಎರಡು ದಿನಗಳ ಉತ್ಸವವನ್ನು ಹಿರಿಯ ಇತಿಹಾಸ ಸಂಶೋಧಕ ಡಾ. ಎಂ. ಎಂ.ಕಲಬುರ್ಗಿ ಉದ್ಘಾಟಿಸಿದರು. ಭಾಷೆ ಎನ್ನುವುದು ಬೆಳೆಯೂ ಹೌದು ಬೇಲಿಯೂ ಹೌದು. ಹಾಗಾಗಿ ಗಡಿ ಭಾಗದಲ್ಲಿ ಭಾಷೆ ಮತ್ತು ಸಂಸ್ಕೃತಿ ಸುಭದ್ರಗೊಳ್ಳಬೇಕಾದ ಅಗತ್ಯತೆ ಇದೆ. ‘ಇಂದು ಮರಾಠಿಗರು ಹೆಮ್ಮಪಟ್ಟುಕೊಳ್ಳುವಂತಹ ಶಿವಾಜಿ ಮಹಾರಾಜರ ಮನೆತನವನ್ನು ಹುಡುಕಿದರೆ ಮೂಲ ಕನ್ನಡನಾಡು, ಅವರ ಮನೆತನದ ಹೆಸರೆಲ್ಲವೂ ಕನ್ನಡದ್ದು ಎನ್ನುವುದು ತಿಳಿದುಕೊಂಡರೆ ಹೆಮ್ಮೆ ಎನಿಸುತ್ತದೆ. ದಕ್ಷಿಣ ಮಹಾರಾಷ್ಟ್ರ ಒಂದು ಕಾಲಕ್ಕೆ ಕರ್ನಾಟಕಕ್ಕೆ ಸೇರಿತ್ತು. 13ನೆ ಶತಮಾನದಲ್ಲಿ ಮಹಾರಾಷ್ಟ್ರವನ್ನು ಆಳಿದವರು ಕರ್ನಾಟಕದ ರಾಜರು. ಇದು ಶಾಸನವೇ ಹೇಳುವಂತಹ ಸತ್ಯ. ನಮ್ಮಲ್ಲಿ 25 ಸಾವಿರ ಶಾಸನ ಸಿಕ್ಕರೆ ಅಲ್ಲಿ ಒಂದು ಸಾವಿರ ಶಾಸನ ಮಾತ್ರ ದೊರೆತಿದೆ. ಇದರಿಂದ ಮಹಾರಾಷ್ಟ್ರ ಎನ್ನುವುದು ಕನ್ನಡಿಗರ ಭಾಗವಾಗಿತ್ತು. ಮರಾಠಿಗರು ಇಂದು ಕನ್ನಡ ನಾಡಲ್ಲಿ ಸಂತೃಪ್ತರಾಗಿದ್ದಾರೆ. ಹಾಗಾಗಿ ಭಾಷೆ ಭಿನ್ನವಾದರೂ ಭಾವ ಒಂದೇ’ ಎಂದು ಕಲಬುರ್ಗಿ ಅಭಿಪ್ರಾಯಿಸಿದರು.
ಜೋಯಿಡಾ ಕ್ಷೇತ್ರದ ಶಾಸಕ ಸುನೀಲ್ ಹೆಗಡೆ ಗಡಿ ಭಾಗದ ಮೂಲಭೂತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ, ಅಭಿವೃದ್ಧಿ ದೃಷ್ಟಿಯಿಂದ ಗಡಿಭಾಗಕ್ಕೆ ವಿಶೇಷ ಗಮನ ಹರಿಸುವಂತೆ ಮನವಿ ಮಾಡಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಉಸ್ತುವಾರಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ವೈಚಾರಿಕ ನೆಲೆಗಟ್ಟಿನಲ್ಲಿ ಅಭಿವೃದ್ಧಿಯ ಕುರಿತು ಚಿಂತನೆಗಳು ನಡೆದರೆ ಮಾತ್ರ ಗಡಿಭಾಗದಲ್ಲಿ ಅಭಿವೃದ್ಧಿಯ ಆಶಾಕಿರಣ ಮೂಡಲು ಸಾಧ್ಯ ಎಂದರು. ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಮಾತನಾಡಿ ರಾಜ್ಯದ ಗಡಿಯ 52 ಪ್ರದೇಶಗಳ ಅಭಿವೃದ್ಧಿಗಾಗಿ ಹತ್ತುಕೋಟಿ ರೂ.ಗಳನ್ನು ಮಂಜೂರು ಮಾಡಿದೆ. ತಾವು 10 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಸರಕಾರದ ಮುಂದೆ ಇಟ್ಟಿದ್ದೇನೆ. ಮುಂದಿನ ದಿನಗಳಲ್ಲಿ ಸರಕಾರ ಬಿಡುಗಡೆ ಮಾಡುವ ಭರವಸೆಯನ್ನು ಹೊಂದಿದ್ದೇನೆ.ಗಡಿಭಾಗದ ಅಭಿವೃದ್ಧಿಗೆ ಆಯಾ ಭಾಗದ ಸ್ಥಿತಿಗತಿಯನ್ನು ನೋಡಿ ಯೋಜನೆಯನ್ನು ರೂಪಿಸಲಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳು, ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.ಸಂಸ್ಕೃತಿ
ಬಿಂಬಿಸಿದ ಶೋಭಾಯಾತ್ರೆ:ಗಡಿ ಉತ್ಸವದ ಅಂಗವಾಗಿ ನಡೆದ ಶೋಭಾಯಾತ್ರೆ ಬುಡಕಟ್ಟು ಸಮುದಾಯದ ಜಾನಪದ ಸಂಸ್ಕೃತಿಯನ್ನು ಬಿಂಬಿಸುವಂತಿತ್ತು. ಮುಂಭಾಗದಲ್ಲಿ ಕನ್ನಡಾಂಬೆಯ ಭಾವಚಿತ್ರವನ್ನೊಳಗೊಂಡ ಭವ್ಯತೇರು. ಅದರ ಪೂರ್ಣಕುಂಬ ಹೊತ್ತ ಮಹಿಳೆಯರ ಸಾಲು, ಜಾನಪದ ಸಂಸ್ಕೃತಿಯನ್ನು ಬಿಂಬಿಸುವ ಸ್ಥಳೀಯ ಕುಣಬಿಗಳ ಕಲಾತಂಡ, ಸಿದ್ದಿಗಳ ಡಮಾಮಿ ನೃತ್ಯ, ಗೌಳಿಗರ ಗೌಳಿ ಕುಣಿತ, ಕುಂದಗೋಳದ ವೀರಗಾಸೆ, ಸುಗ್ಗಿ ಕುಣಿತ, ಚಂಡೆ ವಾದನ, ಡೊಳ್ಳು ಕುಣಿತ ಝಾಂಜ್ ಪಥಕ್ ಜೊತೆಯಲ್ಲಿ ಪೊಲೀಸ್ ಬ್ಯಾಂಡ್, ಶಾಲಾವಿದ್ಯಾರ್ಥಿಗಳ ಲೆಜಿಮ್, ಇತಿಹಾಸ ಪುರುಷರ ವೇಷಧಾರಿಗಳು, ಕನ್ನಡಾಂಬೆಯ ಜಯಘೋಷಗಳು ಮೆರವಣಿಗೆಯ ಶೋಭೆಯನ್ನು ಹೆಚ್ಚಿಸಿತ್ತು.
ವಿಚಾರ ಗೋಷ್ಠಿಗಳು: ‘ಗಡಿ ಜನರ ಬದುಕು-ಬವಣೆ’ ಮತ್ತು ‘ಗಡಿ ಹಳ್ಳಿಗಳ ಸಮಸ್ಯೆ-ಪರಿಹಾರದ ಹೆಜ್ಜೆಗಳೂ’ ಶೈಕ್ಷಣಿಕ ವಿಚಾರಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಂದ ವಿಚಾರ ಮಂಡನೆ, ಈ ವಿಷಯದ ಕುರಿತಾಗಿ ಗೋಷ್ಠಿಗಳು ನಡೆದವು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಾಹಿತಿ ವಿಷ್ಣು ನಾಯ್ಕ, ಹಿರಿಯ ರಂಗಕರ್ಮಿ ಹೊಲಿಶೇಖರ್, ಸ್ಥಳೀಯ ಪತ್ರಕರ್ತರು, ಚಿಂತಕರು ಗೋಷ್ಠಿಯಲ್ಲಿ ಭಾಗವಹಿಸಿದ್ದರು.ಇಲ್ಲಿ ವಾಸ್ತವ್ಯವಿರುವ ಕುಣಬಿ, ದೇಸಾಯಿ, ದೇವಳಿ ಮತ್ತು ಮರಾಠಿಗರ ಬದುಕಿನ ಚಿತ್ರಣವನ್ನು ಎಳೆಎಳೆಯಾಗಿ ಬಿಚ್ಚಿಟ್ಟು, ಸೌಲಭ್ಯ ವಂಚಿತ ಗ್ರಾಮದಲ್ಲಿ ಅವರ ಬವಣೆಯ ಮೇಲೆ ಬೆಳಕು ಚೆಲ್ಲುವ ರೀತಿಯಲ್ಲಿ ವಿಚಾರಗೋಷ್ಠಿಯಲ್ಲಿ ವಿಚಾರಗಳು ಚರ್ಚೆಯಾದವು.ಸರಕಾರ ಈ ನಿಟ್ಟಿನಲ್ಲಿ ಗಡಿಭಾಗದ ಅಭಿವೃದ್ಧಿಗೆ ವಿಶೇಷ ಗಮನಹರಿಸಬೇಕೆಂಬ ನಿಟ್ಟಿನಲ್ಲಿ ಗೋಷ್ಠಿಗಳಲ್ಲಿ ವ್ಯಕ್ತವಾದ ವಿಚಾರಗಳು ಸರಕಾರಕ್ಕೆ ಸಲಹೆಯನ್ನು ನೀಡುವಂತಿತ್ತು.
ಸಾಂಸ್ಕೃತಿಕ ಕಾರ್ಯಕ್ರಮಗಳು: ಎರಡು ದಿನಗಳ ಕಾಲ ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೇಡರಾಸ, ಒಪ್ಪನಾ, ಬಡಾಯಿ ನೃತ್ಯ, ಬೇಡೆ ನೃತ್ಯ, ತಾಂಗಟಾ, ಜಾನಪದ ಕಲಾನೃತ್ಯ, ರಂಗಗೀತೆಗಳು ಹಾಗೂ ಸ್ಥಳಿಯ ಶಾಲೆಯ ವಿದ್ಯಾರ್ಥಿಗಳ ವೈವಿಧ್ಯಮಯ ಕಾರ್ಯಕ್ರಮಗಳು,ವಿವಿಧ ಸಂಗೀತ ಕಾರ್ಯಕ್ರಮಗಳು ಸ್ಥಳೀಕರಲ್ಲದೆ ಉತ್ಸವಕ್ಕೆ ಹೊರಗಿನಿಂದ ಬಂದ ಕಲಾಸಕ್ತರನ್ನು ಸಾಂಸ್ಕೃತಿಕ ಲೋಕದಲ್ಲಿ ವಿಹರಿಸುವಲ್ಲಿ ಯಶಸ್ವಿಯಾಯಿತು.
ಈ ನಾಡಿನ ಆತ್ಮ ಸಾಕ್ಷಿಯನ್ನು ಕಲಕುವಂತಹ ಮೂರು ಘಟನೆಗಳು ನಮ್ಮ ಮುಂದೆಯೇ ನಡೆದು ಹೋಗಿದೆ.ಆದರೆ ಅದಕ್ಕೆ ಸ್ಪಂದಿಸುವಂತಹ ಸಂವೇದನೆಗಳನ್ನು ಮಾತ್ರ ನಾಡು ಕಳೆದುಕ ...
Click here to post your views ಶತಮಾನಗಳಿಂದ ಕಾಡಿನಲ್ಲಿ ನೆಲೆಸಿರುವ ಆದಿವಾಸಿಗಳು ಹಕ್ಕುಪತ್ರ ಮತ್ತು ಸಾಗುವಳಿ ಚೀಟಿ ಕೇಳಿದರ ...
ಈ ಇಂಡಿಯಾಕ್ಕೆ ಸಂವಿಧಾನ ಕೊಟ್ಟ ಮಹಾನ್ ನಾಯಕರ ಆ ವ್ಯಂಗ್ಯ ಚಿತ್ರ ಬಂದಾಗ ಅದನ್ನ ...
ಎಸೆಸೆಲ್ಸಿ ಫಲಿತಾಂಶ ಪ್ರಕಟವಾಗಿ ತೇರ್ಗಡೆಯಾದ ಮಕ್ಕಳು ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲ ...
ನಾವು ಬೆಳಗಾಂನಿಂದ ಅವ್ಯಕ್ತ ಭಾವನೆಗಳನ್ನು ತುಂಬಿಕೊಂಡು ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಹೊರಟೆವ ...
ಭಾರತ ಕಂಡ ಅತ್ಯಂತ ಸಂವೇದನಾಶೀಲ ಮತ್ತು ಪ್ರತಿಭಾವಂತ ವ್ಯಂಗ್ಯಚಿತ್ರಕಾರ ಶಂಕರ್ ಅವರು 1949ರಲ ...
ಮೊದಲಿಗೆ ಅಯ್ಯಂಗಾರ್ ಗೋಳ್ವಾಲ್ಕರ್ಗೆ ಈ ಕೆಳಗಿನ ಅಂಶಗಳತ್ತ ಬೆಟ್ಟು ಮಾಡಿದರು:ಮೊದಲನೆಯದು, ಶ ...
ಭೇಟಿಯನ್ನು ವರದಿ ಮಾಡುವುದಕ್ಕಾಗಿ ನಾಗಪುರದಿಂದ ಹೋಗಿದ್ದ ಪೊಲೀಸ್ ಅಧಿಕಾರಿಯ ಮೇಲೆ ಮಿಶ ...
ಭಾರತೀಯ ಸಂವಿಧಾನವನ್ನು ಟೀಕಿಸಿದ ಗೋಳ್ವಾಲ್ಕರ್, ಓರ್ವ ಸಾಮಾನ್ಯ ವ್ಯಕ್ತಿ ಅರ್ಥ ಮಾಡ ...