
ಉಡುಪಿ, ಜ.25: ‘ಚಿಟ್ಟಾಣಿ’ ಎಂಬ ಮೂರಕ್ಷರದಿಂದಲೇ ಯಕ್ಷಗಾನದ ಕಂಪು ಪಸರಿಸಿರುವ ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳಲ್ಲಿ ಜನಪ್ರಿಯರಾಗಿರುವ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರು ಈಗ ಯಕ್ಷಗಾನ ಕ್ಷೇತ್ರಕ್ಕೆ ಪ್ರತಿಷ್ಠಿತ ‘ಪದ್ಮ’ ಪ್ರಶಸ್ತಿಯನ್ನು ದೊರಕಿಸಿಕೊಟ್ಟ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹೊಸದಿಲ್ಲಿಯಲ್ಲಿ ಇಂದು ಪ್ರಕಟವಾದ ಈ ವರ್ಷದ ‘ಪದ್ಮ’ ಪ್ರಶಸ್ತಿ ವಿಜೇತರ ಪಟ್ಟಿಯಲ್ಲಿ ಕರ್ನಾಟಕದ ಐವರು ಆಯ್ಕೆಯಾಗಿದ್ದು, ಇವರಲ್ಲಿ ಜನಪ್ರಿಯತೆಯ ದೃಷ್ಟಿಯಿಂದ ನೋಡಿದಾಗ ‘ಪದ್ಮಶ್ರೀ’ ಪ್ರಶಸ್ತಿ ಪಡೆದಿರುವ ಚಿಟ್ಟಾಣಿ ರಾಮಚಂದ್ರ ಹೆಗಡೆಯವರೇ ಮುಂಚೂಣಿಯಲ್ಲಿದ್ದಾರೆ.78ರ ಈ ಇಳಿ ವಯಸ್ಸಿನಲ್ಲೂ ಭೀಮ, ಮಾಗಧ, ಕೀಚಕ, ಭಸ್ಮಾಸುರ, ಕೌರವ, ದುಷ್ಟಬುದ್ಧಿ ಪಾತ್ರ ಧರಿಸಿ ಬಂದು ರಂಗದ ಮೇಲೆ ವಿಜೃಂಭಿಸಿ, ಕಿಕ್ಕಿರಿದು ನೆರೆದ ಯಕ್ಷಗಾನ ಪ್ರೇಮಿಗಳ ಹೃದಯಕ್ಕೆ ಲಗ್ಗೆ ಹಾಕಬಲ್ಲ ಸಾಮರ್ಥ್ಯವನ್ನು ಬಣ್ಣದ ಬದುಕಿಗೆ ಬಂದು 65 ವರ್ಷ ಕಳೆದರೂ, ಇಂದೂ ಚಿಟ್ಟಾಣಿ ಉಳಿಸಿಕೊಂಡಿದ್ದಾರೆ ಎಂಬುದಕ್ಕೆ ನಿನ್ನೆ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಯಕ್ಷಗಾನ ಪ್ರದರ್ಶನವೇ ಸಾಕ್ಷಿ.

ಯಕ್ಷಗಾನ ಪ್ರೇಮಿಗಳ ಮಟ್ಟಿಗೆ- ಅದು ಕರಾವಳಿ, ಮಲೆನಾಡು ಜಿಲ್ಲೆಗಳಿರಲಿ ಅಥವಾ ದೂರದ ಮುಂಬೈ, ಬೆಂಗಳೂರು, ಮೈಸೂರು, ಹೊಸದಿಲ್ಲಿ ಇರಲಿ- ಇಂದು ಯಕ್ಷಗಾನದಲ್ಲಿರುವ ಏಕೈಕ ತಾರಾ ಕಲಾವಿದ (ಸೂಪರ್ಸ್ಟಾರ್) ಎಂದರೆ ಅದು ಚಿಟ್ಟಾಣಿ ಮಾತ್ರ. ನಿನ್ನೆ ಭೀಮನಾಗಿ ಚಿಟ್ಟಾಣಿಯವರು ರಾಜಾಂಗಣದಲ್ಲಿ ಕಿಕ್ಕಿರಿದು ನೆರೆದ ಯಕ್ಷಗಾನ ಪ್ರೇಮಿಗಳನ್ನು ಮೋಡಿ ಮಾಡಿದ್ದು ನೋಡಿದಾಗ, ನಿಜವಾದ ಕಲಾವಿದನಿಗೆ ಜಾತಿ,ಮತ, ಪ್ರಾಯದ ಹಂಗು ಇರುವುದಿಲ್ಲ ಎಂಬುದು ಅಕ್ಷರಶ: ನಿಜವೆನಿಸಿತ್ತು.
ಚಿಟ್ಟಾಣಿ ಹೊನ್ನಾವರ ತಾಲೂಕಿನ ಹೊಸಾಕುಳಿ ಗ್ರಾಮದಲ್ಲಿ 1934ರಲ್ಲಿ ಜನಿಸಿದರು. ಸುಬ್ರಾಯ ಹೆಗಡೆ ಮತ್ತು ಗಣತಿ ದಂಪತಿಯ ಐವರು ಮಕ್ಕಳಲ್ಲಿ ಮೂರನೆಯವರು. ಓದಿದ್ದು ಎರಡನೆ ತರಗತಿಯವರೆಗೆ ಮಾತ್ರ. ಬಾಳಗದ್ದೆ ರಾಮಕೃಷ್ಣ ಭಟ್ಟ ಇವರ ಆರಂಭಿಕ ಯಕ್ಷಗಾನ ಗುರು. ಮುಂದೆ ಅವರು ಯಾವುದೇ ನಿರ್ದಿಷ್ಟ ಗುರುವಿನ ಸಾಂಪ್ರದಾಯಿಕ ಶಿಕ್ಷಣದ ಶಿಸ್ತಿಗೆ ಒಳಪಡದಿದ್ದರೂ, ಏಕಲವ್ಯನಂತೆ ತಾನು ಕಂಡ ಪ್ರಸಿದ್ಧ ಕಲಾವಿದರ ಒಳ್ಳೆಯ ಅಂಶಗಳನ್ನು ಸ್ವಪ್ರಯತ್ನದಿಂದ ಅಭ್ಯಾಸ ನಡೆಸಿ ಅವುಗಳನ್ನು ಕಲಾವಿದನಾಗಿ ತನ್ನ ಬತ್ತಳಿಕೆಗೆ ಸೇರಿಸಿಕೊಂಡರು.
ತನ್ನ 14ನೆ ಪ್ರಾಯದಲ್ಲಿ ಮುಖಕ್ಕೆ ಬಣ್ಣ ಬಳಿದುಕೊಂಡು, ಕಾಲಿಗೆ ಗೆಜ್ಜೆ ಕಟ್ಟಿ ರಂಗಸ್ಥಳಕ್ಕಿಳಿದ ಚಿಟ್ಟಾಣಿ, ಇಂದೂ ಗೆಜ್ಜೆಯನ್ನು ತನ್ನ ಬಣ್ಣದ ಪೆಟ್ಟಿಗೆಗೆ ಸೇರಿಸಿಲ್ಲ, ಮುಖದ ಬಣ್ಣವನ್ನು ಇಂದೂ ಶಾಶ್ವತವಾಗಿ ಅಳಿಸಿ ಕುಣಿತ ನಿಲ್ಲಿಸಿಲ್ಲ. ಪ್ರತಿಯೊಂದು ಪಾತ್ರದಲ್ಲೂ ತನ್ನದೇ ಆದ ಸ್ವಂತಿಕೆಯನ್ನು ಅಳವಡಿಸಿಕೊಂಡು ಅದನ್ನು ನೋಡುವ ಪ್ರೇಕ್ಷಕನ ಮನಮುಟ್ಟುವಂತೆ ಮಾಡುವ ಕಲೆ ಚಿಟ್ಟಾಣಿಯವರಿಗೆ ಕರತಲಾಮಲಕ.
ಯಕ್ಷಗಾನದಲ್ಲಿ ಇವರೊಬ್ಬ ತಾರೆಯಾದರೂ ‘ತಾರಾತನ’ ಇನ್ನೂ ಅವರ ತಲೆಗೇರಿಲ್ಲ ಎಂಬುದಕ್ಕೆ ಅವರ ಪ್ರದರ್ಶನವೇ ಸಾಕ್ಷಿ.ಪ್ರೇಕ್ಷಕ ವರ್ಗ ಚಿಕ್ಕದಿರಲಿ ಅಥವಾ ನಿನ್ನೆ ರಾಜಾಂಗಣದಲ್ಲಿ ಕಂಡುಬಂದಂತೆ ಕಿಕ್ಕಿರಿದು ನೆರೆದಿರಲಿ, ಚಿಟ್ಟಾಣಿಯವರೊಳಗಿನಸ ಕಲಾವಿದ ಎಂದೂ ಬೇಸರಿಸಿದ್ದಿಲ್ಲ. ಹೀಗಾಗಿ ಚಿಟ್ಟಾಣಿಗೆ ಚಿಟ್ಟಾಣಿಯೇ ಸಾಟಿ. ಪ್ರಾಯಶ: ಶೃಂಗಾರ ರಸಾಭಿವ್ಯಕ್ತಿಯಲ್ಲಿ ಚಿಟ್ಟಾಣಿಯವರನ್ನು ಮೀರಿಸುವ ಮತ್ತೊಬ್ಬ ಕಲಾವಿದ ರಂಗದ ಮೇಲೆ ಬಂದಿಲ್ಲ ಎನ್ನಬಹುದು. ಹೀಗಾಗಿ ಚಿಟ್ಟಾಣಿಯವರ ಕೀಚಕ,ಮಾಗಧನಂತಥ ಪಾತ್ರವೂ ಪ್ರೇಕ್ಷಕನಿಗೆ ಇಷ್ಟವಾಗುತ್ತಿತ್ತು.ಚಿಟ್ಟಾಣಿ ಇಡಗುಂಜಿ, ಸಾಲಿಗ್ರಾಮ, ಅಮೃತೇಶ್ವರಿ, ಬಚ್ಚಗಾರು, ಶಿರಸಿ ಮೇಳಗಳಲ್ಲಿ ಪ್ರಧಾನ ವೇಷಧಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರಿಗೆ ರಾಜ್ಯೋತ್ಸವ ಪ್ರಶಸ್ತಿ, ಜಾನಪದ ಶ್ರೀ ಪ್ರಶಸ್ತಿಗಳು ಸಿಕ್ಕಿವೆ. ಇದೀಗ ‘ಪದ್ಮಶ್ರೀ’ ಪ್ರಶಸ್ತಿ ಅವರ ಪ್ರಶಸ್ತಿಯ ಕಿರೀಟಕ್ಕೆ ಇರಿಸಿದ ಬೆಳ್ಳಿ ತುರಾಯಿಯಾಗಿದೆ.
ಅಕಾಡಮಿ ಅಭಿನಂದನೆ: ಯಕ್ಷಗಾನಕ್ಕೆ ಚೊಚ್ಚಲ ಪದ್ಮಶ್ರೀ ಪ್ರಶಸ್ತಿಯನ್ನು ತಂದಿತ್ತ ಯಕ್ಷಗಾನದ ಹಿರಿಯ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆಯವರನ್ನು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡಮಿಯ ಅಧ್ಯಕ್ಷ ಹಾಗೂ ಯಕ್ಷಗಾನ ಕಲಾವಿದ ಪ್ರೊ.ಮಲ್ಪೆ ಲಕ್ಷ್ಮೀನಾರಾಯಣ ಸಾಮಗ ಅಭಿನಂದಿಸಿದ್ದಾರೆ.ಯಕ್ಷಗಾನ ರಂಗದ ಸೂಪರ್ಸ್ಟಾರ್ ಆಗಿರುವ ಚಿಟ್ಟಾಣಿಯವರಿಗೆ ಈ ಪ್ರಶಸ್ತಿ ಬಂದಿರುವುದರಿಂದ ಕಲೆಯ ಗೌರವ ಹೆಚ್ಚಿದೆ. ವಿದ್ಯಾವಂತರಲ್ಲದೇ, ಯಕ್ಷಗಾನದ ಔಪಚಾರಿಕ ಶಿಕ್ಷಣವನ್ನು ಪಡೆಯದ ಚಿಟ್ಟಾಣಿ ಏರಿದ ಎತ್ತರ ಎಲ್ಲರಿಗೂ ಆದರ್ಶಪ್ರಾಯ ಎಂದು ಪ್ರೊ, ಸಾಮಗ, ಪ್ರಶಸ್ತಿಯ ಸುದ್ದಿಗೆ ಖುಷಿಯಿಂದ ಪ್ರತಿಕ್ರಿಯಿಸಿದ್ದಾರೆ.
ಈ ನಾಡಿನ ಆತ್ಮ ಸಾಕ್ಷಿಯನ್ನು ಕಲಕುವಂತಹ ಮೂರು ಘಟನೆಗಳು ನಮ್ಮ ಮುಂದೆಯೇ ನಡೆದು ಹೋಗಿದೆ.ಆದರೆ ಅದಕ್ಕೆ ಸ್ಪಂದಿಸುವಂತಹ ಸಂವೇದನೆಗಳನ್ನು ಮಾತ್ರ ನಾಡು ಕಳೆದುಕ ...
Click here to post your views ಶತಮಾನಗಳಿಂದ ಕಾಡಿನಲ್ಲಿ ನೆಲೆಸಿರುವ ಆದಿವಾಸಿಗಳು ಹಕ್ಕುಪತ್ರ ಮತ್ತು ಸಾಗುವಳಿ ಚೀಟಿ ಕೇಳಿದರ ...
ಈ ಇಂಡಿಯಾಕ್ಕೆ ಸಂವಿಧಾನ ಕೊಟ್ಟ ಮಹಾನ್ ನಾಯಕರ ಆ ವ್ಯಂಗ್ಯ ಚಿತ್ರ ಬಂದಾಗ ಅದನ್ನ ...
ಎಸೆಸೆಲ್ಸಿ ಫಲಿತಾಂಶ ಪ್ರಕಟವಾಗಿ ತೇರ್ಗಡೆಯಾದ ಮಕ್ಕಳು ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲ ...
ನಾವು ಬೆಳಗಾಂನಿಂದ ಅವ್ಯಕ್ತ ಭಾವನೆಗಳನ್ನು ತುಂಬಿಕೊಂಡು ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಹೊರಟೆವ ...
ಭಾರತ ಕಂಡ ಅತ್ಯಂತ ಸಂವೇದನಾಶೀಲ ಮತ್ತು ಪ್ರತಿಭಾವಂತ ವ್ಯಂಗ್ಯಚಿತ್ರಕಾರ ಶಂಕರ್ ಅವರು 1949ರಲ ...
ಮೊದಲಿಗೆ ಅಯ್ಯಂಗಾರ್ ಗೋಳ್ವಾಲ್ಕರ್ಗೆ ಈ ಕೆಳಗಿನ ಅಂಶಗಳತ್ತ ಬೆಟ್ಟು ಮಾಡಿದರು:ಮೊದಲನೆಯದು, ಶ ...
ಭೇಟಿಯನ್ನು ವರದಿ ಮಾಡುವುದಕ್ಕಾಗಿ ನಾಗಪುರದಿಂದ ಹೋಗಿದ್ದ ಪೊಲೀಸ್ ಅಧಿಕಾರಿಯ ಮೇಲೆ ಮಿಶ ...
ಭಾರತೀಯ ಸಂವಿಧಾನವನ್ನು ಟೀಕಿಸಿದ ಗೋಳ್ವಾಲ್ಕರ್, ಓರ್ವ ಸಾಮಾನ್ಯ ವ್ಯಕ್ತಿ ಅರ್ಥ ಮಾಡ ...